ಇಳಕಲ್ಲ ಮಹಿಳೆಗೆ ನೈಜೆರಿಯನ್ ಆರೋಪಿಯಿಂದ ದೋಖಾ

ಇಳಕಲ್ಲ ಮಹಿಳೆಗೆ ನೈಜೆರಿಯನ್ ಆರೋಪಿಯಿಂದ ದೋಖಾ
ಬಾಗಲಕೋಟೆ: ಮ್ಯಾಟ್ರಮೋನಿ ವೆಬ್‌ಸೈಟ್ ಮುಖಾಂತರ ಭಾರತೀಯನ ಹೆಸರಿನಲ್ಲಿ ಪರಿಚಯ ಮಾಡಿಕೊಂಡು ಇಳಕಲ್ಲಿನ ಮಹಿಳೆಯನ್ನು ವಂಚಿಸಿದ್ದ ನೈಜೇರಿಯಾ ಮೂಲದ ಆರೋಪಿಯನ್ನು ಇಲ್ಲಿನ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. 
ಬಂಧಿತ ಆರೋಪಿಯನ್ನು ನೈಜೆರಿಯಾ ದೇಶದ ಆಲಿವರ್ ಉಗ್ವು ಒಕೆಚುಕ್ವು(೪೭) ಎಂದು ಗುರುತಿಸಲಾಗಿದೆ. ಈತ ಇಳಕಲ್ಲ ಮೂಲದ ವಿಚ್ಛೇದಿತ ಮಹಿಳೆಗೆ ಸತ್ಯ ಅಮಿತ್ ಎನ್ನುವ ಹೆಸರಿನಿಂದ ಪರಿಚಯವಾಗಿದ್ದ. ಮೊದಲು ಸ್ನೇಹಿತನಾಗಿ ಪರಿಚಯ ಮಾಡಿಕೊಂಡು ನಂತರ ಮದುವೆಯಾಗುವುದಾಗಿ ನಂಬಿಸಿದ್ದ. ತಾನು ಲಂಡನ್‌ನಲ್ಲಿ ವಾಸಿಸುತ್ತಿದ್ದು, ಭಾರತಕ್ಕೆ ಆಗಮಿಸಿದಾಗ ೧ ಕೋಟಿ ಯುಎಸ್ ಡಾಲರ್‌ನ್ನು ದೆಹಲಿಯಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಹೀಗಾಗಿ ಅದನ್ನು ಬಿಡಿಸಿಕೊಳ್ಳಲು ಭಾರತದ ರೂಪಾಯಿ ಬೇಕೆಂದು ಆಕೆ ಕಡೆಯಿಂದ ಹಂತ, ಹಂತವಾಗಿ ೫.೫೫ ಲಕ್ಷ ರೂ.ಗಳನ್ನು ಹಾಕಿಸಿಕೊಂಡಿದ್ದ. ನಂತರ ಮೋಸ ಹೋಗಿರುವುದು ಅರಿವಾದ ತಕ್ಷಣ ನೊಂದ ಮಹಿಳೆ ೨೦೨೪ರ  ಜನವರಿ ತಿಂಗಳಿನಲ್ಲಿ ಇಳಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 
ಭಾರತೀಯ ವ್ಯಕ್ತಿಯ ಫೋಟೋವನ್ನೇ ಬಳಸಿಕೊಂಡು ತನ್ನ ಹೆಸರನ್ನು ಸತ್ಯ ಅಮಿತ್ ಎಂದು ಹೇಳಿಕೊಂಡಿದ್ದ ಆತ ಒಂದು ತಿಂಗಳ ಕಾಲ ಸಂಪರ್ಕದಲ್ಲಿದ್ದ. ವ್ಯಕ್ತಿ ನೈಜೇರಿಯಾ ಮೂಲದವನಾದರೂ ಮುಂಬೈನಲ್ಲಿ ವಾಸವಿದ್ದ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಂದ ೪ ಮೊಬೈಲ್ ಫೋನ್, ಒಂದು ಲ್ಯಾಪ್‌ಟಾಪ್, ಪಾಸಪೋರ್ಟ್, ಯುಎಸ್ ಡಾಲರ್‌ನ ಕಂತೆಗಳನ್ನು ವಶಕ್ಕೆ ಪಡೆದಿದ್ದಾರೆ.  
ಎಸ್‌ಪಿ ಸಿದ್ದಾರ್ಥ ಗೋಯಲ್, ಎಎಸ್‌ಪಿ ಮಹಾಂತೇಶ್ವರ ಜಿದ್ದಿ ಅವರ ಮಾರ್ಗದರ್ಶನದಲ್ಲಿ ಸಿಇಎನ್ ಠಾಣೆ ಡಿವೈಎಸ್‌ಪಿ ಗಿರೀಶ ಭೋಜನ್ನವರ ಅವರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಪಿಎಸ್‌ಐ ನಿತಿನ್ ಕುಮಾರ್, ಪಿಸಿಗಳಾದ ರುದ್ರಯ್ಯ ಹಿರೇಮಠ, ಬಿ.ಕೆ.ಹಳ್ಳೂರ ಅವರು ತಂಡದಲ್ಲಿ ಕಾರ್ಯನಿರ್ವಹಿಸಿದ್ದು, ಸಿಬ್ಬಂದಿ ಕಾರ್ಯಕ್ಕೆ ಎಸ್‌ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.