ಮನೆ, ಬೆಳೆ ಹಾನಿ ವೀಕ್ಷಿಸಿದ ಶಾಸಕ ಜೆ.ಟಿ.ಪಾಟೀಲ
ಬಾಗಲಕೋಟೆ:
ಅತೀಯಾದ ಮಳೆಯಿಂದಾಗ ಬೀಳಗಿ ಮತಕ್ಷೇತ್ರ ವ್ಯಾಪ್ತಿಯ ಬಾಡಗಂಡಿ ಮತ್ತು ರೊಳ್ಳಿ ಗ್ರಾಮಗಳಲ್ಲಿ ಹಾನಿಗೊಳಗಾದ ವಿವಿಧ ಬೆಳೆ ಹಾಗೂ ಕುಸಿದ ಮಣ್ಣಿನ ಮನೆಗಳನ್ನು ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ ಸೋಮವಾರ ವೀಕ್ಷಣೆ ಮಾಡಿದರು.
ಬಾಡಗಂಡಿ ಮತ್ತು ರೊಳ್ಳಿ ಗ್ರಾಮಗಳ ವ್ಯಾಪ್ತಿಯ ಹಾನಿಗೊಳಗಾದ ಈರುಳ್ಳಿ, ಮೆಕ್ಕೆಜೋಳ ಹಾಗೂ ಸೂರ್ಯಕಾಂತಿ ಸೇರಿದಂತೆ ಇತರೆ ಬೆಳೆಗಳನ್ನು ವೀಕ್ಷಣೆ ಮಾಡಿದರು. ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿಯ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡರು. ಅತೀಯಾದ ಮಳೆಯಿಂದಾಗಿ ಸರಿಯಾಗಿ ಬೆಳೆ ಬಾರದೆ ರೈತ ಸಂಕಷ್ಟಕ್ಕೆ ಒಳಗಾಗಿದ್ದಾನೆ. ಆದ್ದರಿಂದ ಹಾನಿಗೆ ಸೂಕ್ತ ಪರಿಹಾರ ಒದಗಿಸಲು ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೊಸ ರೊಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಅವರು ಕುಸಿದ ಮಣ್ಣಿನ ಮನೆಗಳನ್ನು ವೀಕ್ಷಣೆ ಮಾಡಿ ತುರ್ತಾಗಿ 5 ಸಾವಿರ ರೂ.ಗಳನ್ನು ಒದಗಿಸುವ ಕೆಲಸವಾಗಬೇಕು. ಬಿದ್ದ ಮನೆಗಳ ಸರ್ವೆ ನಿಖರವಾಗಿರಬೇಕು. ಯಾವುದೇ ಮನೆಗಳು ಬಿಟ್ಟು ಹೋಗಬಾರದು. ಸರ್ವೆ ಕಾರ್ಯದಲ್ಲಿ ಮನೆ ಬಿದ್ದಿರುವ ಬಗ್ಗೆ ಶೇಕಡಾವಾರು ಪ್ರಮಾಣವನ್ನು ಪರಿಶೀಲಿಸಿ ಸೂಕ್ತ ಪರಿಹಾರ ದೊರೆಯುವ ನಿಟ್ಟಿನಲ್ಲಿ ಕೆಲಸ ಮಾಡಲು ಸೂಚಿಸಿದರು.
ನಂತರ ಹಾನಿ ವಿವರದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಬೀಳಗಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟಾರೆಯಾಗಿ 203 ಮನೆಗಳನ್ನು ಹಾನಿಗೊಳಗಾಗಿವೆ. 5920 ಹೆಕ್ಟೆರ್ ತೋಟಗಾರಿಕೆ ಬೆಳೆ ಹಾಗೂ 7500 ಹೆಕ್ಟೆರ್ ಕೃಷಿ ಬೆಳೆ ಹಾನಿಯಾಗಿರುವುದನ್ನು ಅಂದಾಜಿಸಲಾಗಿದೆ. ಮುಖ್ಯವಾಗಿ ಈರುಳ್ಳಿ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳು ಹಾನಿಗೊಳಗಾಗಿದ್ದು, ಇದರಿಂದ ರೈತರು ನಷ್ಟವನ್ನು ಅನುಭವಿಸುತ್ತಿದ್ದಾನೆ. ಹಾನಿಯ ಬಗ್ಗೆ ಸೂಕ್ತ ಸರ್ವೆ ಮಾಡಿ ರೈತರಿಗೆ ಸರಕಾರ ಮಾರ್ಗಸೂಚಿಯನ್ವಯ ಪರಿಹಾರಕ್ಕೆ ಒದಗಿಸಲು ಕ್ರಮಕೈಗೊಳ್ಳಲು ಸೂಚಿಸಿದರು.

ಮತಕ್ಷೇತ್ರ ವ್ಯಾಪ್ತಿಯಲ್ಲಿ 203 ಮನೆಗಳು ಹಾನಿಗೀಡಾಗಿದ್ದು, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಂದ ನಿಖರವಾದ ಸಮೀಕ್ಷೆ ಮಾಡಿ ಸೂಕ್ತ ಪರಿಹಾರ ದೊರೆಯುವಂತೆ ಆಗಬೇಕು. ಹಾನಿಗೊಳಗಾದ ಕೆಲವು ಪ್ರದೇಶಗಳಿಗೆ ಸಾಂಖೇತಿಕವಾಗಿ ಭೇಟಿ ನೀಡಿ ವೀಕ್ಷಣೆ ಮಾಡಲಾಗಿದೆ. ಅಧಿಕಾರಿಗಳು ಹಾನಿಗೊಳಗಾದ ಯಾವುದೇ ಜಮೀನು ಹಾಗೂ ಮನೆಗಳನ್ನು ಬಿಟ್ಟು ಹೋಗದ ರೀತಿಯಲ್ಲಿ ಜಂಟಿ ಸರ್ವೆ ನಡೆಸಿ ಸೂಕ್ತ ವರದಿಯನ್ನು ಸರಕಾರಕ್ಕೆ ಸಲ್ಲಿಸುವ ಕಾರ್ಯವಾಗಬೇಕೆಂದು ತಿಳಿಸಿದರು.

ಭೇಟಿ ಸಮಯದಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವೀಂದ್ರ ಹಕಾಟಿ, ಬೀಳಗಿ ತಹಶೀಲ್ದಾರ ವಿನೋದ ಹತ್ತಳ್ಳಿ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಇದ್ದರು.
ಬಾಕ್ಸ್ . . .
*ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ಭೇಟಿ*
ಬೀಳಗಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ ಅವರು ಗ್ರಂಥಾಲಯ, ಕಂಪ್ಯೂಟರ ಕೊಠಡಿ ಹಾಗೂ ವಿದ್ಯಾರ್ಥಿಗಳು ಕೋಣೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಂಥಾಲಯ ಸರಿಯಾಗಿ ಬಳಕೆಯಾಗಿರದನ್ನು ಕಂಡು ಇನ್ನು ಮುಂದೆ ಬಳಕೆಯಾಗುವಂತೆ ಕ್ರಮವಹಿಸಬೇಕು. ನಂತರ ಅಡಿಗೆ ಕೋಣೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆಹಾರ ಪದಾರ್ಥಗಳನ್ನು ವೀಕ್ಷಿಸಿ ಊಟ ಸವಿದರು. ಆಹಾರ ಧಾನ್ಯವಿರುವ ಕೋಣೆಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ತರಕಾರಿ ಯಾವುದೇ ತರಕಾರಿ ಇರದನ್ನು ಕಂಡರು. ಅಲ್ಲದೇ ರೆಪ್ರೀಜರೇಟರ್ ಇದ್ದರು ಅದು ಬಳಕೆಯಾಗದಿರುವದನ್ನು ನೋಡಿ ಮೇಲ್ವಚಾರಕರಿಗೆ ಹಾಗೂ ತಾಲೂಕಾ ಅಧಿಕಾರಿಗಳಿಗೆ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.


