ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ವಿವರಿಸಿದ ಆರ್.ಬಿ.ಟಿ
ನವದೆಹಲಿ: ಕರ್ನಾಟಕದ ಅಬಕಾರಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಆರ್.ಬಿ. ತಿಮ್ಮಾಪೂರ ಸಾಹೇಬರು ಇಂದು ರಾಜಧಾನಿ ದೆಹಲಿಯ ಕೃಷಿ ಭವನದಲ್ಲಿ ಕೇಂದ್ರ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಕಬ್ಬು ಮತ್ತು ತೈಲ ಬೀಜಗಳ ನಿರ್ದೇಶನಾಲಯದ ನಿರ್ದೇಶಕ ಅರವಿಂದಕುಮಾರ ರಾವತ ಅವರನ್ನು ಭೇಟಿ ಮಾಡಿ, ರಾಜ್ಯದ ಕಬ್ಬು ಬೆಳೆಗಾರರಿಗೆ, ವಿಶೇಷವಾಗಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರೈತರಿಗೆ ಎದುರಾಗುತ್ತಿರುವ ತೀವ್ರ ಸಮಸ್ಯೆಗಳ ಕುರಿತು ವಿವರವಾದ ಚರ್ಚೆ ನಡೆಸಿದರು.
ಸಭೆಯಲ್ಲಿ ಸಚಿವ ತಿಮ್ಮಾಪೂರ ಅವರು, ಕಳೆದ ಕೆಲವು ವರ್ಷಗಳಿಂದ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಕಬ್ಬಿನ ಬೆಲೆ ಕುಸಿತ, ಸಕ್ಕರೆ ಕಾರ್ಖಾನೆಗಳ ಸಾಲ ಮರುಪಾವತಿ ವಿಳಂಬ, ಕನಿಷ್ಠ ಬೆಂಬಲ ಬೆಲೆ (ಎಫ್ಆರ್ಪಿ) ಹೆಚ್ಚಳದ ಕೊರತೆ, ರಫ್ತು ನೀತಿಯಲ್ಲಿ ಏರ್ಪಡುತ್ತಿರುವ ಬದಲಾವಣೆಗಳಿಂದಾಗಿ ಉಂಟಾಗುತ್ತಿರುವ ಅನಿಶ್ಚಿತತೆ ಹಾಗೂ ಮುಧೋಳ ಸೇರಿದಂತೆ ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರಿಗೆ ವಿಶೇಷವಾಗಿ ತಲುಪುತ್ತಿರುವ ತೊಂದರೆಗಳನ್ನು ಕೇಂದ್ರ ಅಧಿಕಾರಿಗಳ ಗಮನಕ್ಕೆ ತಂದರು.
“ಕರ್ನಾಟಕದಲ್ಲಿ ಕಬ್ಬು ಬೆಳೆ ರೈತರ ಜೀವನಾಡಿಯಾಗಿದೆ. ಬಾಗಲಕೋಟೆ ಜಿಲ್ಲೆಯ ಬಹು ಭಾಗದಲ್ಲಿ ಸಾವಿರಾರು ರೈತರು ಕಬ್ಬು ಬೆಳೆಯ ಮೇಲೆಯೇ ಅವಲಂಬಿತರಾಗಿದ್ದಾರೆ. ಆದರೆ ಪ್ರಸ್ತುತ ಸ್ಥಿತಿಯಲ್ಲಿ ಅವರಿಗೆ ನ್ಯಾಯ ದೊರಕುತ್ತಿಲ್ಲ. ಕೇಂದ್ರ ಸರ್ಕಾರ ತಕ್ಷಣವೇ ಮಧ್ಯ ಪ್ರವೇಶಿಸಿ ರೈತರ ಹಿತ ಕಾಯಬೇಕು” ಎಂದು ಸಚಿವರು ನಿರ್ದೇಶಕರಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಬ್ಬಿನ ಎಫ್ಆರ್ಪಿ ಯುಕ್ತಿಯುಕ್ತ ಹೆಚ್ಚಳ, ಸಕ್ಕರೆ ರಫ್ತು ನೀತಿಯಲ್ಲಿ ಸ್ಥಿರತೆ, ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕೇಂದ್ರದ ಸಹಾಯಧನ ಮತ್ತು ರೈತರ ಬಾಕಿ ಪಾವತಿಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಸಚಿವರು ಒತ್ತಡ ಹೇರಿದರು.
ನಿರ್ದೇಶಕ ಶ್ರೀ ಅರವಿಂದ ಕುಮಾರ್ ರಾವತ ಅವರು ಸಚಿವರ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಈ ಬಗ್ಗೆ ಕೇಂದ್ರ ಸರ್ಕಾರದ ಉನ್ನತ ಮಟ್ಟದಲ್ಲಿ ಚರ್ಚಿಸಿ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದುಗೌಡ ಪಾಟೀಲ, ಬಾಗಲಕೋಟ ಜಿಲ್ಲಾ ಕಿಸಾನ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಆನಂದ ಹಟ್ಟಿ ಅವರು ಉಪಸ್ಥಿತರಿದ್ದರು


