ವಿವಿಧ ಸಂತ್ರಸ್ತರಿಗೆ ಹಕ್ಕುಪತ್ರ ವಿತರಿಸಿದ ಶಾಸಕ ಮೇಟಿ
ಬಾಗಲಕೋಟೆ:
ಬಾಗಲಕೋಟೆ ನಗರದ ವಿವಿಧ ಮುಳುಗಡೆ ಸಂತ್ರಸ್ಥರಿಗೆ ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷರಾದ ಎಚ್.ವಾಯ್.ಮೇಟಿ ಹಕ್ಕುಪತ್ರಗಳನ್ನು ವಿತರಣೆ ಮಾಡಿದರು.
ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಕಚೇರಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡ ಸಂತ್ರಸ್ತರಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಹಕ್ಕುಪತ್ರಗಳನ್ನು ವಿತರಿಸಿ, ಮಾತನಾಡಿದ ಅವರು ಮುಳುಗಡೆ ಸಂತ್ರಸ್ತರು, ವಯಸ್ಕರ ಮಕ್ಕಳು ಹಾಗೂ ಬಾಡಿಗೆದಾರರು ಸೇರಿ ಒಟ್ಟು 40 ಜನ ಸಂತ್ರಸ್ತರಿಗೆ ಹಕ್ಕುಪತ್ರಗಳನ್ನು ನೀಡಲಾಗಿದೆ. ಹಕ್ಕುಪತ್ರ ಪಡೆದುಕೊಂಡ ಸಂತ್ರಸ್ತರು ನೋಂದಣಿ ಮಾಡಿಸಿಕೊಂಡು ಮನೆ ಕಟ್ಟಿಕೊಂಡು ನೆಮ್ಮದಿಯ ಜೀವನ ನಡೆಸಲು ತಿಳಿಸಿದರು.
ಹಕ್ಕು ಪತ್ರಗಳನ್ನು ಪಡೆದುಕೊಂಡು ಕೂಡದೇ ಬೇಗನೆ ಮನೆ ಕಟ್ಟಿಕೊಳ್ಳುವ ಕೆಲಸವಾಗಬೇಕು. ನಿವೇಶನ ಖಾಲಿ ಬಿಡಬಾರದು. ಖಾಲಿ ನಿವೇಶನ ಬಿಟ್ಟರೆ ಮುಳ್ಳು ಕಂಟಿ ಬೆಳೆಯುತ್ತದೆ. ಸ್ವಚ್ಚವಾಗಿ ಇಟ್ಟುಕೊಂಡು ನಿವೇಶನದ ಸದುಪಯೋಗ ಪಡಿಸಿಕೊಳ್ಳಬೇಕು. ಯುನಿಟ್-1 ಮತ್ತು 2ರಲ್ಲಿ ಬರುವ ಮೂಲೆ ನಿವೇಶನಗಳನ್ನು ಶೀಘ್ರದಲ್ಲಿಯೇ ಲಿಲಾವು ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಮುಖ್ಯ ಅಭಿಯಂತರ ಚಂದ್ರಹಾಸ ಬಂಡಿ ಮಾತನಾಡಿ ಪ್ರಾಧಿಕಾರದಿಂದ ಮುಳುಗಡೆ ಸಂತ್ರಸ್ತರಿಗೆ ನಿವೇಶನದ ಹಕ್ಕುಪತ್ರಗಳನ್ನು ನೀಡಿದ್ದು, ಮನೆಯನ್ನು ಕಟ್ಟಿಕೊಂಡು ಸ್ಥಳಾಂತರಗೊಂಡು ನೆಮ್ಮದಿಯ ಜೀವನ ಕಟ್ಟಿಕೊಳ್ಳುವ ಕೆಲಸವಾಗಬೇಕು. ಮೂರನೇ ಯುನಿಟ್ನಲ್ಲಿ ಸಹ ನಿವೇಶನ ಹಂಚಿಕೆ ಪ್ರಾರಂಭ ಮಾಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬುಡಾದ ಅಧ್ಯಕ್ಷ ಅಬ್ದುಲರಜಾಕ ಮೈನೂದ್ದೀನ ಬೇನೂರ, ಬಿಟಿಡಿಎ ಪುನರ್ವಸತಿ ಅಧಿಕಾರಿ ನವೀನಕುಮಾರ ಕಟ್ಟಿಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.


