ಅಪಘಾತ ಪ್ರಕರಣ: ಚಾಲಕನಿಗೆ ೧೦ ವರ್ಷ ಜೈಲು ಶಿಕ್ಷೆ

ಅಪಘಾತ ಪ್ರಕರಣ: ಚಾಲಕನಿಗೆ ೧೦ ವರ್ಷ ಜೈಲು ಶಿಕ್ಷೆ

ಅಪಘಾತ ಪ್ರಕರಣ: ಚಾಲಕನಿಗೆ ೧೦ ವರ್ಷ ಜೈಲು ಶಿಕ್ಷೆ..!       
ಬಾಗಲಕೋಟೆ:
ನಗರದಲ್ಲಿ ೨೦೧೮ರಲ್ಲಿ ಸಂಭವಿಸಿದ್ದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪಾನಮತ್ತನಾಗಿ ವಾಹನ ಚಲಾಯಿಸಿ ವಿದ್ಯಾರ್ಥಿಗಳ ಸಾವಿಗೆ ಕಾರಣನಾಗಿದ್ದ ಆರೋಪಿಗೆ ಇಲ್ಲಿನ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ೧೦ ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
 ೨೦೧೮ರ ಜೂನ್ ೪ರಂದು ಆರೋಪಿ ವಿಠ್ಠಲ ಸದಾಶಿವ ಟೋಣಪೆ(೩೬) ಮದ್ಯಪಾನ ಮಾಡಿ ಬುಲೆರೋ ಜೀಪನ್ನು ಬಾಗಲಕೋಟೆ ಕಡೆಯಿಂದ ವಿದ್ಯಾಗಿರಿ ಕಡೆಗೆ ಅತಿ ವೇಗವಾಗಿ, ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದ. ವಾಹನ ಅತೀ ವೇಗದಿಂದ ಬಂದ ಕಾರಣ, ಎದುರಿನಿಂದ ಬರುತ್ತಿದ್ದ ಟಂಟಂ ರಿಕ್ಷಾ ಮತ್ತು ಅದರ ಹಿಂದಿದ್ದ ಮೋಟಾರ್ ಸೈಕಲ್ಗೆ ಢಿಕ್ಕಿ ಹೊಡೆಸಿದ್ದ.
 ಈ ಅಪಘಾತದಲ್ಲಿ ಟಂಟಂ ರಿಕ್ಷಾದಲ್ಲಿದ್ದ ವಿದ್ಯಾರ್ಥಿಗಳು, ಚಾಲಕ ಮತ್ತು ಮೋಟಾರ್ ಸೈಕಲ್ ಸವಾರನಿಗೆ ಗಂಭೀರ ಗಾಯಗಳಾಗಿದ್ದವು. ಟಂಟAನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳಾದ ಶ್ರವಣಕುಮಾರ ಜಯರಾಮ ಚವ್ಹಾಣ (೧೫) ಮತ್ತು ಅಮಿತ್ ಬಸೆಟ್ಟೆಪ್ಪ ಅಂಗಡಿ (೧೩) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಅಪಘಾತದ ನಂತರ ಆರೋಪಿ ವಿಠ್ಠಲ ತಮ್ಮ ಜೀಪನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದ.
 ಘಟನೆಯ ನಂತರ ಬಾಗಲಕೋಟೆಯ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಸಂಗ್ರಹಿಸಿದ ಸಾಕ್ಷಾಧಾರಗಳಿಂದ ಆರೋಪಿಯು ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದರಿಂದಲೇ ಅಪಘಾತ ಸಂಭವಿಸಿದೆ ಎಂದು ದೃಢಪಟ್ಟಿದೆ. ಈ ಸಂಬAಧ ಅಂದಿನ ಪೊಲೀಸ್ ಇನ್ಸ್ಪೆಕ್ಟರ್ ಎಂ.ಎಸ್. ತುಳಸಿಗೇರಿ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
 ಪ್ರಕರಣದ ವಿಚಾರಣೆಯನ್ನು ನಡೆಸಿದ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಮೇಶ ಏಕಬೋಟೆ ಅವರು ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರಿ ಅಭಿಯೋಜಕ ಎಸ್.ಎಂ. ಹಂಜಿ ಅವರು ವಾದ ಮಂಡಿಸಿದ್ದರು.ನ್ಯಾಯಾಲಯದ ತೀರ್ಪಿನ ಪ್ರಕಾರ, ಆರೋಪಿಗೆ ಭಾರತೀಯ ದಂಡ ಸಂಹಿತೆಯ ಕಲಂ ೩೦೪(೨)ರ ಅಡಿಯಲ್ಲಿ ೧೦ ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ೫೦ ಸಾವಿರ ರೂ.ದಂಡ, ಕಲಂ ೩೦೮ರ ಅಡಿಯಲ್ಲಿ ೩ ವರ್ಷಗಳ ಶಿಕ್ಷೆ ಮತ್ತು ೨೫ ಸಾವಿರ ರೂ.ದಂಡ ವಿಧಿಸಿದೆ. 
 ಅಲ್ಲದೆ, ಮೋಟಾರು ವಾಹನ ಕಾಯ್ದೆ ೧೯೮೮ರ ಕಲಂ ೧೮೫ರ ಅಡಿಯಲ್ಲಿ ೬ ತಿಂಗಳ ಶಿಕ್ಷೆ ಮತ್ತು ೧೦ ಸಾವಿರ ರೂ. ದಂಡ ಹಾಗೂ ಕಲಂ ೧೮೭ರ ಅಡಿಯಲ್ಲಿ ೩ ತಿಂಗಳ ಸಾಮಾನ್ಯ ಶಿಕ್ಷೆ ಮತ್ತು ೫೦೦ ರೂ.ದಂಡ ವಿಧಿಸಿ. ನೊಂದವರಿಗೆ ಪರಿಹಾರ ನೀಡಲು ಆದೇಶಿಸಿದೆ.