ಪ್ರಜಾಸೌಧಕ್ಕಾಗಿ ಬಾಗಲಕೋಟೆ ಚಲೋ: ಸೋಮವಾರ ಜಿಲ್ಲಾಡಳಿತಕ್ಕೆ ಮುತ್ತಿಗೆ!

ರಬಕವಿ-ಬನಹಟ್ಟಿ:
ಬನಹಟ್ಟಿಯಲ್ಲೇ ಪ್ರಜಾಸೌಧ ನಿರ್ಮಿಸಬೇಕೆಂಬ ಹಕ್ಕಿನ ಆಗ್ರಹ ದಿನದಿಂದ ದಿನಕ್ಕೆ ಮತ್ತಷ್ಟು ತೀವ್ರಗೊಳ್ಳುತ್ತಿದ್ದು, ಇದೀಗ ಹೋರಾಟ ಮತ್ತಷ್ಟು ವಿಶೇಷತೆಗಳನ್ನು ಹೊಂದುವಲ್ಲಿ ಕಾರಣವಾಗಿದೆ. ಬನಹಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರ ಬೆಂಬಲದೊAದಿಗೆ ಶನಿವಾರ ಆರಂಭವಾದ ಪಾದಯಾತ್ರೆ ಸೋಮವಾರ ಬಾಗಲಕೋಟೆ ಜಿಲ್ಲಾಡಳಿತ ಭವನ ತಲುಪಿ ಹಕ್ಕೊತ್ತಾಯದ ಹೋರಾಟವಾಗಿ ರೂಪುಗೊಳ್ಳಲಿದೆ.

ಬನಹಟ್ಟಿಯ ಪ್ರಜಾಸೌಧ ಹೋರಾಟಕ್ಕೆ ಬೆಂಬಲ ಸೂಚಿಸಿರುವ ವಿವಿಧ ಗ್ರಾಮಗಳ ಗ್ರಾಮಸ್ಥರು ತಮ್ಮ ಹಕ್ಕಿಗಾಗಿ ನಡೆಯುವ ಈ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆAದು ಸ್ಪಷ್ಟಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲವೆಂಬ ದಿಟ್ಟ ಸಂದೇಶವನ್ನು ಸತ್ಯಾಗ್ರಹಿಗಳು ನೀಡಿದ್ದಾರೆ.

ಶನಿವಾರ ಮುಧೋಳದಲ್ಲಿ ವಾಸ್ತವ್ಯ ಹೂಡಿ, ಭಾನುವಾರ ತುಳಸಿಗೇರಿಯ ರಾಮಾರೂಢ ಮಠದಲ್ಲಿ ವಾಸ್ತವ್ಯ ನಡೆಸಿ, ಸೋಮವಾರ ಬೆಳಗ್ಗೆ ಬಾಗಲಕೋಟೆ ಜಿಲ್ಲಾಡಳಿತ ಭವನದತ್ತ ಪಾದಯಾತ್ರೆ ಮುಂದುವರಿಯಲಿದೆ. ಜಿಲ್ಲಾಡಳಿತ ಭವನಕ್ಕೆ ಆಗಮಿಸಿ ತಮ್ಮ ನ್ಯಾಯಯುತ ಹಕ್ಕೊತ್ತಾಯವನ್ನು ನೇರವಾಗಿ ಮಂಡಿಸುವುದಾಗಿ ಸತ್ಯಾಗ್ರಹಿಗಳು ಘೋಷಿಸಿದ್ದಾರೆ.
ಪ್ರಜಾಸೌಧ ಬನಹಟ್ಟಿಯಲ್ಲೇ ನಿರ್ಮಾಣವಾಗಬೇಕು; ಇದು ಯಾರ ಮೇಲಿನ ಉಪಕಾರವಲ್ಲ, ಜನರ ನ್ಯಾಯಯುತ ಹಕ್ಕು. ಹಕ್ಕು ಸಿಗುವವರೆಗೂ ಹೋರಾಟ ನಿಲ್ಲದೆಂಬ ದಿಟ್ಟ ನಿಲುವಿನೊಂದಿಗೆ ಹೋರಾಟಗಾರರು ಮುನ್ನಡೆಯುತ್ತಿದ್ದಾರೆಂದು ಹೋರಾಟ ಸಮಿತಿ ಅಧ್ಯಕ್ಷ ಶಂಕರ ಸೊರಗಾಂವಿ ತಿಳಿಸಿದರು.
ಪಾದಯಾತ್ರೆಯಲ್ಲಿ ರಾಜೇಂದ್ರ ಭದ್ರನ್ನವರ, ಮಾಳು ಹಿಪ್ಪರಗಿ, ಸೋಮು ಗೊಂಬಿ, ಬಸವರಾಜ ಜಾಡಗೌಡ, ಪ್ರಶಾಂತ ಕೊಳಕಿ, ಬ್ರೀಜ್ಮೋಹನ ಡಾಗಾ, ರೇವಪ್ಪ ಗುಣಕಿ, ಚಿದಾನಂದ ಹೊರಟ್ಟಿ, ಈಶ್ವರ ಪಾಟೀಲ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಗ್ರಾಮಸ್ಥರ ಬೆಂಬಲ: ಪ್ರಜಾಸೌಧ ಬನಹಟ್ಟಿಯಲ್ಲಿಯೇ ಆಗಬೇಕೆಂದು ನಾವಲಗಿ, ಆಸಂಗಿ, ಯಲ್ಲಟ್ಟಿ, ಕುಲಹಳ್ಳಿ, ಜಗದಾಳ, ಬಂಡಿಗಣಿ ಸೇರಿದಂತೆ ಅನೇಕ ಗ್ರಾಮಸ್ಥರು ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಬನಹಟ್ಟಿಯಲ್ಲಿ ನಡೆಯುತ್ತಿರುವ ಸತ್ಯಾಗ್ರಹಕ್ಕೆ ಸ್ವಯಂ ಪ್ರೇರಿತವಾಗಿ ಎಲ್ಲ ಗ್ರಾಮಗಳ ಗ್ರಾಮಸ್ಥರು ಬೆಂಬಲ ಸೂಚಿಸಿ ಹೋರಾಟದಲ್ಲಿ ಪಾಲ್ಗೊಳ್ಳುವದಾಗಿ ಸ್ಪಷ್ಟಪಡಿಸಿದರು.


