ಸಂಘರ್ಷಕ್ಕೆ ನಾಂದಿ ಹಾಡಿದ ಆಡಿಯೋ ಬಾಂಬ್
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹಾಗೂ ಮುಧೋಳ ಶಾಸಕ ಆರ್.ಬಿ.ತಿಮ್ಮಾಪೂರ ಅವರ ನಡುವಿನ ಆಡಿಯೋ ಸಂಭಾಷಣೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಕೈಕಮಾಂಡ್ ನಲ್ಲಿ ಹಣ ಇದ್ದವರಿಗೆ ಮಂತ್ರಿಗಿರಿ ಎಂಬ ಮಾತು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಜಿಲ್ಲಾ ಕಾಂಗ್ರೆಸ್ ನಲ್ಲಿರುವ ಒಡಕನ್ನೂ ಇದು ಎತ್ತಿ ತೋರಿಸಿದೆ.

ನಾಡನುಡಿ ವಿಶೇಷ
ಬಾಗಲಕೋಟೆ:
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹಾಗೂ ಮುಧೋಳ ಶಾಸಕ ಆರ್.ಬಿ.ತಿಮ್ಮಾಪೂರ ನಡುವಿನ ಆಡಿಯೋ ಸಂಭಾಷಣೆ ಜಿಲ್ಲಾ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ನಾಯಕರ ನಡುವಿನ ಕಚ್ಚಾಟವನ್ನು ಬಯಲು ಮಾಡಿದೆ.
ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯಾನಂದ ಕಾಶಪ್ಪನವರಗೆ ಆರಂಭದಲ್ಲೇ ವಿಘ್ನ ಎದುರಾಗಿದ್ದು, ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಈ ವಿಷಮ ಸ್ಥಿತಿಗೆ ಕೈಕಮಾಂಡ್ ಮದ್ದು ಅರಿಯದಿದ್ದರೆ ಇದು ಕಾರ್ಯಕರ್ತರ ಮಟ್ಟಕ್ಕೂ ಹರಡುವುದು ನಿಶ್ಚಿತವಾಗಿದೆ.
ಆಡಿಯೋ ಸಂಭಾಷಣೆ ಕೇವಲ ಇಬ್ಬರು ನಾಯಕರ ನಡುವಿನದಾದ್ದರೂ ಜಿಲ್ಲೆಯಲ್ಲಿ ಒಬ್ಬ ನಾಯಕನನ್ನು ಕಂಡರೆ ಮತ್ತೊಬ್ಬರಿಗೆ ಆಗದಂತ ಸ್ಥಿತಿಯಿದೆ. ನಾಯಕರ ನಡುವೆಯೇ ಇಷ್ಟೆಲ್ಲ ಗೊಂದಲವಿಟ್ಟುಕೊಂಡು ಅವರೆಲ್ಲ ನಮಗೆ ಪಾಠ ಮಾಡುತ್ತಾರೆ ಎಂದು ಸಾಮಾನ್ಯ ಕಾರ್ಯಕರ್ತರು ಅಸಮಾಧಾನ ಹೊರಹಾಕುತ್ತಿದ್ದಾರೆ.

ಬಿಜೆಪಿ ಮಣಿಸಲು ಕಾಂಗ್ರೆಸ್ ಪಕ್ಷ ಹೊಸ ಮಾದರಿಯ ಸಂಘಟನೆಯ ಸೂತ್ರಗಳನ್ನು ಹುಡುಕುತ್ತಿದ್ದರೆ, ಸ್ವಪಕ್ಷೀಯ ನಾಯಕರ ಕಚ್ಚಾಟ ಕಾರ್ಯಕರ್ತರನ್ನು ಹೈರಾಣಾಗಿಸುತ್ತಿದೆ.
ಇನ್ನೇನು ಗ್ರಾಪಂದಿಂದ ಹಿಡಿದು ಜಿಪಂವರೆಗೆ ಚುನಾವಣೆ ನಡೆದರೆ ಸಾಕು ಕಾರ್ಯಕರ್ತರಿಗೂ ಅಧಿಕಾರ ಸಿಗುತ್ತದೆ ಎಂದು ಕನಸು ಕಾರ್ಯಕರ್ತರಲ್ಲಿ ಮನೆ ಮಾಡಿದ್ದರೆ ನಾಯಕರ ಕಚ್ಚಾಟ ಎಲ್ಲದಕ್ಕೂ ಎಳ್ಳುನೀರು ಬಿಡುವ ಭಯ ಅವರಲ್ಲಿ ಕಾಡುತ್ತಿದೆ.

ಒಟ್ಟಾರೆ ಆಡಿಯೋ ಬಾಂಬ್ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿದ್ದು, ಹಣವುಳ್ಳವರಿಗೆ ಮಾತ್ರವೇ ಅಧಿಕಾರ ಎಂಬುದು ಶಾಸಕರುಗಳ ಮಟ್ಟದಲ್ಲೇ ಬೇರೂರಿರುವುದರಿಂದ ಸಾಮಾನ್ಯ ಕಾರ್ಯಕರ್ತರಿಗೆ ಅಧಿಕಾರವೆಂಬುದು ಕೇವಲ ತಿರುಕನ ಕನಸು ಎಂಬಂತೆ ವಿಶ್ಲೇಷಣೆಗೆ ಒಳಗಾಗುತ್ತಿದೆ. ಇದು ಮುಂದೆ ಯಾವ ಸ್ವರೂಪ ಪಡೆಯಲಿದೆ ಕಾದು ನೋಡಬೇಕಿದೆ.


