ಕರ್ತವ್ಯಲೋಪ ಡಿಎಚ್ಒ ಡಾ.ರಾಜಕುಮಾರ ಯರಗಲ್ಲ ಅಮಾನತು..!
ನಾಡನುಡಿ ನ್ಯೂಸ್
ಬಾಗಲಕೋಟೆ:
ಕರ್ತವ್ಯಲೋಪದ ಆರೋಪ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜಕುಮಾರ ಯರಗಲ್ಲ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.

ಜು.೧೮ರಂದಷ್ಟೇ ಜಿಲ್ಲಾರೋಗ್ಯಾಧಿಕಾರಿ ಆಗಮಿಸಿದ್ದ ಯರಗಲ್ಲ ಅವರನ್ನು ಕರ್ತವ್ಯಲೋಪದ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ. ಬಾಗಲಕೋಟೆಯಲ್ಲಿ ಎಂಡಿ ವ್ಯಾಸಂಗ ಮಾಡುತ್ತಿರುವ ಅವರ ಪುತ್ರಿ ಡಾ.ಅಂಕಿತಾ ಯರಗಲ್ಲ ಅವರು ಕಾಲೇಜಿಗೆ ಹಾಜರಾಗುತ್ತಲ್ಲೇ ನವನಗರದ ವಾಂಬೆ ಕಾಲೋನಿಯಲ್ಲಿ ವೈದ್ಯಾಧಿಕಾರಿ ಎಂದು ಹಾಜರಿ ತೋರಿಸಿ ೭೫ ಸಾವಿರ ರೂ.ಗಳ ಸಂಬಳ ಪಡೆಯುತ್ತಿರುವ ವಿಷಯವೂ ಸಹ ವಿವಾದಕ್ಕೆ ಕಾರಣವಾಗಿತ್ತು. ರಾಷ್ಟ್ರ ಮಟ್ಟದಲ್ಲಿ ಇದು ವರದಿಯಾಗಿತ್ತು.

ಡಾ.ಯರಗಲ್ಲ ಅವರು ಕಚೇರಿ ಸಮಯದಲ್ಲಿ ಸಾರ್ವಜನಿಕರಿಗೆ ಲಭ್ಯವಿಲ್ಲದೆ, ಅತ್ಯಗತ್ಯ ಕೆಲಸಗಳನ್ನು ವಿಳಂಬ ಮಾಡುತ್ತಿದ್ದಾರೆ. ಸರ್ಕಾರ ಹಾಗೂ ಇಲಾಖೆ ನಿಯಮಗಳನ್ನು ಪಾಲಿಸದೆ ಸ್ವೇಚಾನುಸಾರ ವರ್ತಿಸುತ್ತಿದ್ದಾರೆ ಎಂಬ ಬಗ್ಗೆ ಬಾಗಲಕೋಟೆ ಜಿಪಂ ಸಿಇಒ ಗಜಾನನ ಬಾಲೆ ಅವರು ಸಲ್ಲಿಸಿರುವ ವರದಿಯನ್ನಾಧರಿಸಿ ಆರೋಗ್ಯ ಇಲಾಖೆಯ ಶಿಸ್ತು ಪ್ರಾಧಿಕಾರದ ಆಯುಕ್ತ ಗುರುದತ್ತ ಹೆಗಡೆ ಆದೇಶಿಸಿದ್ದಾರೆ. ಅವರ ಅಮಾನತು ಅವಧಿಯಲ್ಲಿ ಗದಗ ಜಿಲ್ಲಾಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಲಾಗಿದೆ. ಜಿಲ್ಲೆಯಲ್ಲಿ ಅವರು ಅಮಾನತುಗೊಳ್ಳುತ್ತಿರುವುದು ಇದು ಮೂರನೇ ಬಾರಿಯಾಗಿದೆ.



