ಯುವತಿ ರಕ್ಷಣೆಗೆ ಧಾವಿಸಿ ಧರ್ಮದೇಟು ನೀಡಿದವರೇ ಈಗ ಜೈಲುಪಾಲು..!

ಯುವತಿ ರಕ್ಷಣೆಗೆ ಧಾವಿಸಿ ಧರ್ಮದೇಟು ನೀಡಿದವರೇ  ಈಗ ಜೈಲುಪಾಲು..!

ನಾಡನುಡಿ ನ್ಯೂಸ್
ಬಾಗಲಕೋಟೆ:
ಯುವತಿಯನ್ನು ಚುಡಾಯಿಸುತ್ತಿದ್ದ ಬೀದಿ ಕಾಮಣ್ಣನಿಗೆ ಧರ್ಮದೇಟು ನೀಡಿದ ಇಬ್ಬರು ಯುವಕರನ್ನೇ ಬಂಧಿಸುವುದರ ಮೂಲಕ ನವನಗರ ಠಾಣೆ ಪೊಲೀಸರು ವಿವಾದಕ್ಕೆ ಗುರಿಯಾಗಿದ್ದಾರೆ.

ನವನಗರದ ೫೧ನೇ‌ ಸೆಕ್ಟರ್ ನಲ್ಲಿ ಯುವತಿಯನ್ನು ಚುಡಾಯಿಸುತ್ತಿದ್ದ ಯುವಕನಿಗೆ ಇಬ್ಬರು ಯುವಕರು ‌ಧರ್ಮದೇಟು ನೀಡಿದ್ದರು, ಯುವತಿ‌ ಕಡೆಯಿಂದಲೂ ಆತನಿಗೆ ಚಪ್ಪಲಿ ಸೇವೆ ಮಾಡಿಸಿದ್ದರು. ಒದೆ ತಿಂದು ಕ್ಷಮೆ ಕೇಳಿದ್ದ ಯುವಕ ನಂತರ ನವನಗರ ಠಾಣೆಗೆ ಆಗಮಿಸಿ ಹಲ್ಲೆ ನಡೆಸಿದ ಇಬ್ಬರು ಯುವಕರ ವಿರುದ್ಧವೇ ಪ್ರಕರಣ ದಾಖಲಿಸಿದ್ದ. ಪ್ರಕರಣದ ಪೂರ್ವಾಪರ ಆಲಿಸದೆ ಪೊಲೀಸರು ಪ್ರಕರಣ ದಾಖಲಿಸಿಕೊಂಡರೆ ಎಂಬ ಪ್ರಶ್ನೆ ಉದ್ಭವಿಸಿದೆ.

ಪ್ರಕರಣ ದಾಖಲಾಗುತ್ತಿದ್ದಂತೆ ಧರ್ಮದೇಟು ‌ನೀಡಿದ ಇಬ್ಬರು ಯುವಕರಾದ ಚೇತನ್ ಹಾಗೂ ರೋಷನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.


ಮಹಿಳೆಯನ್ನು ಚುಡಾಯಿಸುವುದನ್ನು ನೋಡಿಕೊಂಡು ಸುಮ್ಮನಿರಬೇಕಿತ್ತೆ. ತಕ್ಷಣ ಆಕೆಯನ್ನು ರಕ್ಷಿಸಿದ ತಪ್ಪಿಗೆ ನಮ್ಮ ಮಕ್ಕಳು ಜೈಲಿಗೆ ಹೋಗುವುದಾದರೆ ಇದೆಂಥ ವ್ಯವಸ್ಥೆ ಎಂದು ಬಂಧಿತ ಯುವಕರ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಚುಡಾಯಿಸಿದ ಯುವಕನನ್ನು ಸುದೀಪ್ ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ಬಿಟ್ಟು ಕಳುಹಿಸಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಠಾಣೆಯಲ್ಲಿ ಇದೀಗ ‌ಪ್ರತಿದೂರು ಸಹ ದಾಖಲಾಗಿದೆ ಎನ್ನಲಾಗಿದೆ.