ಬಾಗಲಕೋಟೆ:
ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರ ಕುರಿತಾಗಿ ಉಡುಪಿ ಶಾಸಕ ಯಶಪಾಲ್ ಸುವರ್ಣ ಆಡಿರುವ ಮಾತುಗಳನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಯಶಪಾಲ್ ಸುವರ್ಣ ಅವರ ಅಣಕು ಶವದ ಪ್ರದರ್ಶನ ನಡೆಸಿದರು. ಸುತ್ತಲು ಮಹಿಳೆಯರು ನೆರೆದು ಕಣ್ಣೀರಿಟ್ಟಂತೆ ನಟಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ರಾಜು ಮನ್ನಿಕೇರಿ ಮಾತನಾಡಿ, ರಾಮ ಮಂದಿದರ ಹುಂಡಿ ಕಳ್ಳತನ, ನೀಟ್ ಪರೀಕ್ಷೆ ಅಕ್ರಮದ ಮೂಲಕ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳನ್ನು ವಿಷಯಾಂತರ ಮಾಡಲು ಬಿಜೆಪಿ ನಾಯಕರು ಹೋರಾಟದ ನೇತೃತ್ವ ವಹಿಸಿರುವ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸುತ್ತಿದ್ದಾರೆ. ದೇಶದ ಜನರನ್ನು ಈಗಲೂ ಮರಳು ಮಾಡಬಹುದು ಎಂದು ಇವರುಗಳು ಊಹಿಸಿದ್ದು, ದೇಶದ ಜನ ಬಿಜೆಪಿಯ ಕಳ್ಳಾಟಗಳನ್ನು ನೋಡುತ್ತಿದ್ದಾರೆ. ಅವರನ್ನು ಮನೆಗೆ ಕಳುಹಿಸುವ ಕಾಲ ಸನ್ನಿಹಿತವಾಗಿದೆ ಎಂದರು.
ರಾಹುಲ್ ಗಾಂಧಿ ಅವರ ಕುರಿತಾಗಿ ಹಗುರವಾಗಿ ಮಾತನಾಡಿರುವ ಶಾಸಕ ಯಶಪಾಲ ಸುವರ್ಣ ಅವರು ಬೇಷರತ್ ಕ್ಷಮೆಯಾಚಿಸಬೇಕು. ಪೊಲೀಸರು ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನಗರ ಬ್ಲಾಕ್ ಅಧ್ಯಕ್ಷ ಅಕ್ಬರ್ ಮುಲ್ಲಾ, ಬುಡಾ ಅಧ್ಯಕ್ಷ ರಜಾಕ ಬೇನೂರ, ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಸಿ.ಕಾಂಬಳೆ, ಜೈ ಪ್ರಕಾಶ ಉತ್ತೂರ, ಸುಮಿತ್ರ ಗುಳಬಾಳ, ಅಭೀಷೇಕ ತಳ್ಳಿಕೇರಿ, ಪ್ರಭುದೇವ ರುದ್ರಾಕ್ಷಿ, ಶ್ರವಣ ಖಾತೆದಾರ, ಪ್ರಭು ಹಳ್ಳೂರ, ರೇಣುಕಾ ನಾರಾಯಣಕರ, ರಮೇಶ ಸನದಿ, ವೈ.ವೈ.ತಿಮ್ಮಾಪೂರ, ಹಣಮಂತ ಡೋಣಿ, ಶಂಕರ ತಪಶೆಟ್ಟಿ, ಮುತ್ತು ಜೋಳದ, ಆರ್.ಎ.ಪಟ್ಟಣದ, ಅಜೀಜ ಬಾಳಿಕಾಯಿ ಮತ್ತಿತರರು ನೇತೃತ್ವ ವಹಿಸಿದ್ದರು.